ಬುಧವಾರ, ಮಾರ್ಚ್ 24, 2010

ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು - Courtesy : http://thatskannada.com

ಮಾರ್ಚ್ 23, ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ದಾಸ್ಯಮುಕ್ತಿಗಾಗಿ ಜೀವನವನ್ನೇ ಬಲಿದಾನಗೈದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ಹುತಾತ್ಮರಾದ ದಿನ. ಇಂದಿಗೆ ಈ ವೀರಯೋಧರು ದೇಶಕ್ಕಾಗಿ ಜೀವತೆತ್ತು 79 ವರ್ಷಗಳು ಸಂದಿವೆ. ಇಂದು ನಾವು ದೇಶದ ಒಳಿತಿಗೆ ಶ್ರಮಿಸಿದರೆ ಅದೇ ಈ ವೀರರಿಗೆ ನೀಡುವ ಅತ್ಯುನ್ನತ ಗೌರವ.


"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ..." ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!




ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿ ಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!



ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ 'ಯಾಕೆ ನಗುತ್ತಿದ್ದೀರಿ?' ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ "ಸಾರ್ ನೀವು ಅದೃಷ್ಟವಂತರು!" ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . 'ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?' ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. "ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ 30 ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!"



ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.



ಅಂದು 23 ಮಾರ್ಚ್ 1931. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. 'ಈ ದೇಶಕಾಗಿ ಸಾಯಲೂ ಸಿದ್ಧ' ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ 23 ವರ್ಷ, ಸುಖದೇವ್ ಗೆ 27 ವರ್ಷ ಹಾಗೂ ರಾಜಗುರು ಗೆ 25 ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.



ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ 'ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ' ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ 'ನಾನು ಮೊದಲು ನಾನು ಮೊದಲು' ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ... ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?



ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.



ಭಗತ್ ಸಿಂಗ್,ರಾಜಗುರು , ಸುಖದೇವ್ ರ ಬಲಿದಾನದ ಈ ದಿನ ಅಂತಹದೊಂದು ಸಂಕಲ್ಪ ಮಾಡೋಣ. ಇಲ್ಲದಿದ್ದರೆ ಮತ್ತೊಂದು ಮಾರ್ಚ್ 23 ಬರುತ್ತದೆ, ಹೋಗುತ್ತದೆ. ಮತ್ತು ನಾವು ಒಂದೊಂದೇ ವರ್ಷ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ . ಅಷ್ಟೇ!
 
Regards,


AnilKumar G K

Courtesy : http://thatskannada.com

ಬುಧವಾರ, ಫೆಬ್ರವರಿ 3, 2010

Jan 26: ನಾವು ಜವಾಬ್ದಾರರಲ್ಲ

ನಮಸ್ತೆ,
ಜನವರಿ ತಿಂಗಳು ಕಳೆಯಿತು. ಆದರು ಎಲ್ಲೊ ಏನೋ ತಪ್ಪಿ ಹೋದಂತೆ ನಮ್ಮ ದೇಶದ ಜನತೆಯಲ್ಲಿ ಕಾಣುತ್ತಿದ್ದೇವೆ. ಗಣರಾಜ್ಯೋತ್ಸವದ ಅರ್ಥ ನಾವು ಬೇಕೆಂದೇ ಮರೆಯುತ್ತಿರುವೆಯೋ? ವಿಜಯ ಕರ್ನಾಟಕ ಫೆಬ್. ೩ ೨೦೧೦ ರ ಅನಿಸಿಕೆ ಲೇಖನ image ನೋಡಿ.
ವಂದೇ ಮಾತರಂ

ಮಂಗಳವಾರ, ಜನವರಿ 12, 2010

Naaveke heege?

ನಮಸ್ತೆ,
ಸಾಮಾಜಿಕ ಜವಾಬ್ದಾರಿಯ ಬಗೆಗೆ ನಮ್ಮ ಕಾಳಜಿ ಎಷ್ಟಿದೆ? ಕೆಳಗಿನ link ನೋಡಿ. ವಿಜಯ ಕರ್ನಾಟಕ ಜ. 7 ರ "ನೂರೆಂಟು ಮಾತು" ಅಂಕಣ
https://acrobat.com/#d=boozMz0EAhS5xP73RZbEhg

ಬುಧವಾರ, ಜೂನ್ 24, 2009

ನಮ್ಮೂರ ATM ನಮ್ಮ ಬಳಕೆಗೆ ತಾನೇ ??

By Mail...

ಈಗ೦ತೂ ಎಲ್ಲಾರೂ ಎಟಿಎಂ ಸೌಲಭ್ಯ ಬಳಸುತ್ತಿದ್ದಾರೆ. ಹಾಗೆಯೇ ಎಟಿಎಂನ ಕೀಗಳನ್ನು ಒತ್ತುವಾಗ ಯ೦ತ್ರದಲ್ಲಿ ಕನ್ನಡದ ಆಯ್ಕೆ ಇದ್ದಿದ್ದ್ರೆ ಚೆನ್ನಾಗಿರುತ್ತಿತ್ತು... ಅನ್ಕೊ೦ಡು ಸುಮ್ಮನಾಗೋರು ಕೂಡಾ ಸಾಕಷ್ಟು ಮ೦ದಿ ಇದ್ದಾರೆ. ಆದರೆ ಕರ್ನಾಟಕದಲ್ಲಿ ಬ್ಯಾ೦ಕ್ ಗಳು ಇ೦ತಹ ಮೂಲಭೂತವಾದ ಸೇವೆಗಳನ್ನೂ ಸಹ ಕನ್ನಡದಲ್ಲಿ ಕೊಡದೆ ಇರುವುದು ನಿಜವಾಗಲೂ ದುಃಖದ ಸ೦ಗತಿ. ಕರ್ನಾಟಕದಲ್ಲಿ ಸಿಟಿ ಬ್ಯಾ೦ಕ್ ನ ಹಲವಾರು ಎ.ಟಿ.ಎ೦ ಬ್ರಾ೦ಚ್ ಗಳಿವೆ. ಆದರೆ ಯಾವುದರಲ್ಲೂ ಕನ್ನಡದ ಆಯ್ಕೆಯನ್ನು ಇಟ್ಟಿಲ್ಲ. ಕನ್ನಡಿಗರು ಹೇಗಿದ್ದರೂ ಒತ್ತಾಯ ಮಾಡುವುದಿಲ್ಲ, ಎ.ಟಿ.ಎ೦ ನಲ್ಲಿ ಯಾವ ಭಾಷೆನಲ್ಲಿ ಇದ್ದರೇನು ಅನ್ನೋ ತಪ್ಪು ಕಲ್ಪನೆ ಇವರದು. ಸಿಟಿ ಬ್ಯಾಂಕಿಗೆ ಕರೆ ನೀಡಿ ಮಾತಾಡಬೇಕಾದ್ರೆ ಅದರಲ್ಲಿ ಕನ್ನಡದ ಆಯ್ಕೆ ಇಲ್ಲ. ಅಲ್ಲಿ ನೀವು ಇ೦ಗ್ಲೀಷ್, ತಮಿಳು, ತೆಲುಗು ಅಥವಾ ಹಿ೦ದಿನಲ್ಲಿ ಮಾತಾಡದೇ ಬೇರೆ ದಾರಿನೇ ಇಲ್ಲ. ಈ ಬ್ಯಾ೦ಕ್ ಗಳ ಗ್ರಾಹಕಸೇವಾ ವಿಭಾಗದಲ್ಲಿ ಕರೆ ನೀಡಿದರೆ ಅದು ಆ೦ಧ್ರಾಗೋ, ತಮಿಳುನಾಡಿಗೋ ಮತ್ತೆಲ್ಲಿಗೋ ವರ್ಗಾಯಿಸುತ್ತಾರೆ. ಅಲ್ಲಿಯ ಅಧಿಕಾರಿಗಳು ಕನ್ನಡದಲ್ಲಿ ಸೇವೆ ನೀಡಲು ನಿರಾಕರಿಸುವುದಲ್ಲದೇ, ತೆಲುಗು, ತಮಿಳು ಅಥವಾ ಹಿ೦ದಿಯಲ್ಲಿ ಮಾತನಾಡಿ ಎಂದು ಸೂಚಿಸುತ್ತಾರೆ. ಗ್ರಾಹಕ ಅಕ್ಕಿ ಕೇಳಿದರೆ, ಗೋಧಿ ಕೊಡೋ ಸರ್ಕಾರಿ ನ್ಯಾಯಬೆಲೆ ಅಂಗಡಿಯವರಿಗೂ, ಈ ಬ್ಯಾಂಕಿನವರಿಗೂ ಏನೂ ವ್ಯತ್ಯಾಸವಿಲ್ಲ. ಬ್ಯಾ೦ಕ್ ನ ಈ ನೀತಿಯನ್ನು ಕನ್ನಡಿಗರು ಒಪ್ಪಿರುವುದರಿ೦ದ, ಒ೦ದು ಕಡೆ ಕನ್ನಡದಲ್ಲಿ ಸೇವೆ ಸಿಗುತ್ತಿಲ್ಲ, ಮತ್ತೊ೦ದು ಕಡೆ ಕನ್ನಡಿಗರಿಗೆ ಸಿಗೋ ಉದ್ಯೋಗಾವಕಾಶಾನೂ ಕೈತಪ್ಪಿಹೋಗುತ್ತಿದೆ. RBI ಪ್ರಕಾರ ಕನ್ನಡದಲ್ಲಿ ಸೇವೆ ನೀಡಬೇಕೆ೦ಬ ಕಾನೂನಿದ್ದರೂ ಸಹ... ನಿಮ್ಮಲ್ಲಿ ಯಾರಾದರೂ ಕನ್ನಡದಲ್ಲಿ ಚೆಕ್ ಬರೆದು ಹಾಕಿ ನೋಡೋಣ, ಮಾರನೆ ದಿನನೇ ಅದನ್ನು ಬೌನ್ಸ್ ಮಾಡಿ ಅದಕ್ಕೆ ಫೈನ್ ಹಾಕುತ್ತಾರೆ. ಒಟ್ಟಿನಲ್ಲಿ ಕನ್ನಡದಲ್ಲಿ ಸೇವೆ ಕೇಳುವುದು ಒ೦ದು ಅಪರಾಧ ಅನ್ನೋ ಮಟ್ಟಿಗೆ ಇವರ ಗ್ರಾಹಕ ಸೇವಾ ನೀತಿಗಳು ಇವೆ. ಇದು ಹೀಗೇ ಮು೦ದುವರಿದರೆ ಬ್ಯಾ೦ಕಿ೦ಗ್ ಕ್ಷೇತ್ರದಲ್ಲಿ ಕನ್ನಡವನ್ನು ತರಲು ಸಾಧ್ಯವೇ ಆಗದ ಪರಿಸ್ಥಿತಿ ಬರುತ್ತದೆ. ಐಸಿಐಸಿಐ, ಎಕ್ಸಿಸ್ , ಕೆನರಾ ಬ್ಯಾಂಕ್ ಮು೦ತಾದ ಬ್ಯಾಂಕುಗಳು ತಮ್ಮ ಎ.ಟಿ.ಎಂ ಗಳಲ್ಲಿ ಕನ್ನಡದಲ್ಲಿ ಸೇವೆ ಅಳವಡಿಸಿಕೊ೦ಡಿದ್ದಾರೆ. ಸ್ವಲ್ಪ ಮಟ್ಟಿಗೆ ಗ್ರಾಹಕ ಸೇವೆಯನ್ನೂ ಸಹ ಕನ್ನಡದಲ್ಲಿ ಕೊಡುತ್ತಿದ್ದಾರೆ. ಆದರೆ ಇದನ್ನು ಪ್ರತಿಬಾರಿಯೂ ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಆಫ್ರಿಕಾ ಖಂಡದ ಒಂದು ದೇಶದಲ್ಲಿ ಒಟ್ಟು ೮ ಭಾಷೆಗಳಲ್ಲಿ ಎಟಿಎಂ ಸೌಲಭ್ಯವಿದೆ. ಇದನ್ನು ನೋಡಿದಮೇಲೆ, ಕರ್ನಾಟಕದಲ್ಲಿ ಕೋಟ್ಯಾ೦ತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುವ ಈ ಸಿಟಿ ಬ್ಯಾಂಕಿನವರ "ಕನ್ನಡದಲ್ಲಿ ಸೇವೆ ಕೇಳಬೇಡಿ" ಎಂಬ ಧೋರಣೆಯನ್ನು ಕನ್ನಡದ ಗ್ರಾಹಕ ಯಾಕೆ ಪ್ರಶ್ನಿಸಬಾರದು? ಕನ್ನಡದ ಗ್ರಾಹಕನು ತಮ್ಮ ಭಾಷೆಯಲ್ಲಿ ಸೇವೆ ಪಡೆಯುವ ಹಕ್ಕು ತಮಗೆ ಕಾನೂನು ಸಹಜವಾಗಿಯೇ ನೀಡಿದೆ ಎ೦ಬ ನಿಜಾ೦ಶವನ್ನು ಅರಿತುಕೊಳ್ಳಬೇಕಾಗಿದೆ. ಇನ್ನು ಕಾಯುವುದು ಬೇಡ, ಮು೦ದಿನ ದಿನಗಳಲ್ಲಿ ನಿಮಗೆ ಭಾಷಾ ಆಯಾಮದಲ್ಲಿ ಈ ಬ್ಯಾ೦ಕ್ ಗಳಿ೦ದ ತೊ೦ದರೆಯಾದರೆ ಅವರಿಗೆ ಖ೦ಡಿತ ಬರೆದು ತಿಳಿಸಿ. ಈ ಬರೆಯುವ ಪ್ರಕ್ರಿಯೆಯಿ೦ದಲೇ ಬದಲಾವಣೆ ತರಲು ಸಾಧ್ಯ. ಎ.ಟಿ.ಎ೦ ಯ೦ತ್ರದ ಬಟನ್ ಒತ್ತುವಾಗ, ಬ್ಯಾ೦ಕ್ ನ ಕರೆಗಳನ್ನು ಸ್ವೀಕರಿಸುವಾಗ ಅಥವಾ ಬ್ಯಾ೦ಕ್ ನ ಜೊತೆ ಪತ್ರ ವ್ಯವಹಾರ ಎಲ್ಲಕ್ಕೂ ಕನ್ನಡವನ್ನೇ ಬಳಸಿರಿ. ನಮ್ಮ ಭಾಷೆಯನ್ನು ಉಳಿಸುವುದಲ್ಲದೇ ಕನ್ನಡವನ್ನು ಒ೦ದು ಅನ್ನ ಕೊಡುವ ಭಾಷೆಯಾಗಿ ಮಾಡುವ ಶಕ್ತಿ ಈಗ ನಿಮ್ಮ ಕೈಯಲ್ಲಿದೆ ಎ೦ಬುದನ್ನು ಮರೆಯಬೇಡಿ. ಸಿಟಿ ಬ್ಯಾ೦ಕ್ ಗೆ ಬರೆಯಲು ಈ ವಿಳಾವನ್ನು ಬಳಸಿ - indiaservice@citi.com
ಎಚ್.ಡಿ.ಎಫ್.ಸಿ ಬ್ಯಾ೦ಕ್ - support@hdfcbank.com
ಐಸಿಐಸಿಐ ಬ್ಯಾ೦ಕ್ - customer.care@icicibank.com
ಎ.ಬಿ.ಎನ್ ಆಮ್ರೋ - in.service@in.abnamro.com
ಕಾರ್ಪೊರೇಷನ್ ಬ್ಯಾ೦ಕ್ -cb8803@corpbank.co.in
ಆಕ್ಸಿಸ್ ಬ್ಯಾ೦ಕ್ - szh@axisbank.com


ಬುಧವಾರ, ಮಾರ್ಚ್ 11, 2009

ನನ್ನ ಕಾಲೇಜಿನ ಮೊದಲ ದಿನಗಳು..

ನನ್ನ ಕಾಲೇಜಿನ ಆರಂಭದ ದಿನಗಳ ಬಗ್ಗೆ ಬರೆಯುತ್ತಿದ್ದೇನೆ . ನನ್ನ ಪ್ರಕಾರ ನನ್ನ ಈ 15 ವರ್ಷಗಳ ಜೀವನದಲ್ಲಿ ನನ್ನಲ್ಲಿ ಏಕಾಂಗಿತನ ಅತಿಯಾಗಿ ಕಾಡಿದ್ದು ಈ ಸಮಯದಲ್ಲೇ . ನಾನು LKG ಇಂದ ಒಂದೇ ಸ್ಕೂಲ್ನಲ್ಲೇ ಅಧ್ಯಯನ ಮಾಡಿದ್ದರಿಂದ ನನಗೆ ಆ ಸ್ಕೂಲ್ ಬಿಟ್ಟು ಹೋಗುವ ಪ್ರಸಂಗ ಒದಗಿ ಬಂದಿರಲಿಲ್ಲ . ಹಾಗಾಗಿ ನಾನು ಮೊದಲ ಬಾರಿಗೆ ನನ್ನ ಶಾಲೆ , ಅಲ್ಲಿನ ನನ್ನ ಗುರುಗಳನ್ನು ಬಿಟ್ಟು ಬಂದಾಗ ನನಗಾದ ನೋವು ಅಷ್ಟಿಷ್ಟಲ್ಲ. ಅಲ್ಲದೆ ನನ್ನ ಬಾಲ್ಯದ ಒಡನಾಡಿಗಳನ್ನು ಅಗಲಿ ,ನನ್ನ ತಂದೆ -ತಾಯಿಗಳನ್ನು ಬಿಟ್ಟು ಬರುವುದು ಮನಸ್ಸಿಗೆ ತುಂಬ ಕಷ್ಟವೆನಿಸಿತು . 

ನಾನು ಮೊದಲ ದಿನ ಕಾಲೇಜ್ ಗೆ ಹೋದಾಗ ಎಲ್ಲವು ಅಪರಿಚಿತ ಮುಖಗಳೇ . ಆ ಒಂದು ಕ್ಷಣ ಮನಸ್ಸು ಭಾರವೆನಿಸಿ ದುಖ ಒತ್ತಿ ಬಂದಿತು . ಅಲ್ಲದೆ ನನ್ನ ಎಲ್ಲ ಗೆಳತಿಯರು ನೆನಪಾಗತೊಡಗಿದರು . ಆಗ ಒಮ್ಮೆಲೇ "ನಾನು ಏಕಾದರೂ ಇಲ್ಲಿಗೆ ಬಂದೆನೋ" ಎಂಬ ಯೋಚನೆ ಸುಳಿಯಿತು . ಅಲ್ಲಿ ಎಲ್ಲರು ಉಡುಪಿಯವರೇ ಆಗಿದ್ದರಿಂದ ಅವರೆಲ್ಲರೂ ತಮ್ಮ -ತಮ್ಮ ಗೆಳೆಯ / ತಿಯರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು . ಅಲ್ಲದೆ ಮನಸ್ಸಿನಾಳದಲ್ಲಿ ಸಣ್ಣದಾಗಿ ಮತ್ಸರವೂ ಮೂಡಿತು .ಅ ಸಂದರ್ಭದಲ್ಲಿ ನಾನು ಒಬ್ಬ ಸೂಕ್ತ ಗೆಳತಿಗಾಗಿ ಹಂಬಲಿಸುತಿದ್ದೆ . ಆದರೆ ಇತರರು ತಮ್ಮ ಗೆಳತಿಯರನ್ನು ಹೊಂದಿದ್ದರಿಂದ ನನ್ನ ಕಡೆ ಯಾರು ತಿರುಗಿ ನೋಡಲಿಲ್ಲ .ಆಗ ಒಬ್ಬಳು ಬಂದು ನನ್ನೊಟ್ಟಿಗೆ ಕುಳಿತು ಮಾತನಾಡಿಸಿದಳು . ಅವಳು ಸಹ ಕನ್ನಡ ಮಾಧ್ಯಮದವಳೇ ಆಗಿದ್ದರಿಂದ ನಮ್ಮಿಬ್ಬರ ಸಂಭಾಷಣೆಗೆ ಯಾವುದೇ ಅಡಚಣೆ , ತೊಡಕು ಉಂಟಾಗಲಿಲ್ಲ . ಅವಳು ನಾನು ಬೇರೆ ಕಡೆಯಿಂದ ಬಂದವಳೆಂದು ತಿಳಿದೋ ಉತ್ತಮ ರೀತಿಯಲ್ಲಿಯೇ ನನ್ನ ಬಗ್ಗೆ ವಿಚಾರಿಸಿ , ತನ್ನ ಬಗ್ಗೆಯೋ ತಿಳಿಸಿದಳು . ಆಗ ಒಂದು ಕ್ಷಣ ನನಗೆ ಅತೀವ ಸಂತಸವೆನಿಸಿತು .  

ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ . ಒಬ್ಬ ಲೆಕ್ಟುರೆರ್ ಬಂದು ನಮ್ಮನ್ನು ಎತ್ತರ ಪ್ರಕಾರ ಕೂರಲು ತಿಳಿಸಿದ್ದರಿಂದ ನಾವಿಬ್ಬರು ಬೇರೆ -ಬೇರೆಯಾದೆವು . ನನ್ನ ಪಕ್ಕದಲ್ಲಿ ಇನ್ನೊಬ್ಬಳು ಬಂದು ಕುಳಿತಳು . ನಾನು ಅವಳನ್ನು ಮಾತನಾಡಿಸಲು ಯತ್ನಿಸಿದರೂ ಅವಳು ನನ್ನನ್ನು ಕಡೆಗಣಿಸಿದಳು . ನಂತರ ಭೋಜನ ವಿರಾಮವಿದ್ದಾಗ ಸಹ ಅವಳು ತನ್ನ ಗೆಳತಿಯರೊಂದಿಗೆ ಊಟ ಮಾಡಿದಳು . ಆದರೆ ಅದೇ ಸಂದರ್ಭದಲ್ಲೇ ನಾನು ತಂದಿದ್ದ ಬುತ್ತಿಯಿಂದ ನೀರಿನ ಅಂಶ ಕೆಳಗೆ ಚೆಲ್ಲಿದಾಗ ನನ್ನ ಧೈರ್ಯವು ಕುಂದಿತು . ಎಲ್ಲರು ನನ್ನತ್ತ ನೋಡುತ್ತಿರುವರೆಂದು ಅದೇಕೋ ನನ್ನ ಬಗ್ಗೆ ನಾಚಿಕೆಯನ್ನು ಮೂಡಿಸಿತು .ಅಂದಿನ ಈ ಘಟನೆ ನನ್ನನ್ನು ಸ್ವಲ್ಪ ಪ್ರಮಾಣದಲ್ಲಿ ಖಿನ್ನಗೊಳಿಸಿತು .

ಮರು ದಿವಸ ಬರುವಾಗವೂ ಭಯ ನನ್ನನ್ನು ಆವರಿಸಿತ್ತು . ಅದಲ್ಲದೆ ಅಲ್ಲಿ ಎಲ್ಲರು ಇಂಗ್ಲಿಷ್ನಲ್ಲಿ ಸಂಭಾಷಣೆ ನಡೆಸುತ್ತಿರುವಾಗ ನನಗು ಇಂಗ್ಲಿಷ್ನಲ್ಲಿ ಮಾತನಾಡಬೇಕೆಂಬ ಹಂಬಲವಾಗುತಿತ್ತು .ಬಿಸಿನೆಸ್ ಲೆಕ್ಟುರೆರ್ ಬಂದು ಸಂಪೂರ್ಣವಾಗಿ ಇಂಗ್ಲಿಷ್ನಲ್ಲಿ ಪರಿಚಯ ಮಾಡಿಕೊಂಡಾಗ ನನ್ನ ಮನಸ್ಸಿನಲ್ಲಿ ಆ ವಿಷಯದ ಬಗ್ಗೆ ಪೂರ್ವಗ್ರಹ ಮೂಡಿ ಅದು ಕ್ಲಿಷ್ಟಕರವೆಂದು ಭಯ ಬೇರೂರಿತು .  

ಇದೆ ರೀತಿಯ ಮನಸ್ತಿತಿಯು ಸುಮಾರು 2-3 ವಾರಗಳ ಕಾಲ ನನ್ನಲ್ಲೇ ಮನೆ ಮಾಡಿತ್ತು . ಅದರಿಂದ ಹೊರಬರುವುದು ಕೊಂಚ ಕಷ್ಟವೇ ಎನಿಸಿತು . ಆಗ ನನ್ನ ಮನಸ್ಸನ್ನು ಗಟ್ಟಿಗೊಳಿಸಿದೆ . ಅದೇ ಸಂದರ್ಭದಲ್ಲಿ ಕಿರು ಪರೀಕ್ಷೆಯನ್ನು ಘೋಷಿಸಿದ್ದರಿಂದ ನಾನು ಅದಕ್ಕಾಗೆ ಸಿದ್ಧತೆ ನಡೆಸಿದೆ . ಅಲ್ಲದೆ ಈ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವ ಮೂಲಕ ನನ್ನ ಇರುವಿಕೆಯನ್ನು ಎಲ್ಲರು ಗುರುತಿಸಲಿ ಎಂಬ ಆಶಯದೊಂದಿಗೆ ನಾನು ತಯಾರಾದೆ . ಕಠಿಣ ಪರಿಶ್ರಮ ವಹಿಸಿ ಉತ್ತಮ ಅಂಕಗಳನ್ನೇನೋ ಪಡೆದೆ . ಆದರೆ business ವಿಷಯದಲ್ಲಿ ಮಾತ್ರ ನನ್ನಲ್ಲಿರುವ ಭಯವೇ ಗೆಲುವು ಸಾಧಿಸಿ ನನ್ನನ್ನು ಸೋಲಿಸಿತ್ತು . ನನಗೆ ಅದರ ವಿರುದ್ಧ ಹೊರಾಡಲಾಗಲಿಲ್ಲ . ಇತರ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ಸಂತೋಷವನ್ನು ಈ ನನ್ನ ಸೋಲೇ ಮುಚ್ಚಿ ಹಾಕಿತು . ಅಲ್ಲದೆ ಅದು ನನ್ನ ಜೀವಮಾನದಲ್ಲೇ ಪಡೆದ ಅತ್ಯಂತ ಕನಿಷ್ಠ ಅಂಕವಾಗಿತ್ತು .

ನಂತರ ಸ್ವಲ್ಪ ದಿನಗಳಲ್ಲೇ ಈ ಘಟನೆಯನ್ನು ನನ್ನ ನೆನಪಿನ ಬುಟ್ಟಿ ಇಂದ ಹೊರಹಾಕಿದೆ ಕಾರಣ ನನ್ನ ತರಗತಿಯ ಹೆಚ್ಚು ಪಾಲಿನವರು ನನ್ನಷ್ಟೇ ಅಂಕ ಗಳಿಸಿದ್ದರು . ಅಲ್ಲದೆ ನನ್ನ ಜೊತೆ ಕುಲಿತುಕೊಳ್ಳುವವಳು ನಂತರದಲ್ಲಿ ಸ್ನೇಹಮಯ ಮಾತುಗಳಿಂದ ಮಾತನಾಡಿಸಿದಳು . ಅ ಮಾತುಗಳೇ ನನ್ನಲ್ಲಿ ಉತ್ಸಾಹವನ್ನು ತುಂಬಿದವು . ಒಬ್ಬ ಇಂಗ್ಲಿಷ್ ಮಾಧ್ಯಮದವಳ ಅಂಕಕ್ಕೆ ಸಮನಾಗಿ ನಾನು ಅಂಕ ಗಳಿಸಿದ್ದು ನನ್ನ ಆತ್ಮ ವಿಶ್ವಾಸವನ್ನು ವ್ರುದ್ಧಿಗೊಲಿಸಿತು . ಈ ಪರೀಕ್ಷೆಯ ನಂತರ ಮೊದಲಿದ್ದ ಭಯ ನನ್ನ ಮನಸ್ಸಿನಿಂದ ಬೇರೆ ಕಡೆ ಪ್ರಯಾಣ ನಡೆಸಿತ್ತು . ಹಾಗಾಗಿ ಆ ಭಯದಿಂದ ನಾನು ಮುಕ್ತಿ ಹೊಂದಿದೆ .

ಹೀಗೆ ನನ್ನ ಕಾಲೇಜ್ ಜೀವನ ಆರಂಭವಾಗಿ ಮುಂದೆ ನಾನು ಕಾಲೇಜಿನ ಕಡೆ ಹೆಚ್ಚಿನ ಆಸಕ್ತಿ ವಹಿಸಲು ಮೊದಲು ಮಾಡಿದೆ . ಮುಂದುವರಿಯಲಿದೆ... 
-- ರಮ್ಯ ರಾವ್